Wednesday, November 16, 2016

ಅದು ಯಾವಾಗ ಮೈಯೊಳಗೆ ಲಗ್ಗೆ ಹಾಕಿತೋ...??

ಓದು...

ಇದೊಂದು ನನ್ನ ಪರಮ ಮಿತ್ರ. ತೀರ ನಾನೇನು ಸಾಹಿತ್ಯದ ಗೀಳು ಅಂಟಿಸಿಕೊಂಡ ಮನುಷ್ಯನಲ್ಲ. ದಿನಪತ್ರಿಕೆಯ ಅಂಕಣಗಳು, ಬೆರಳೆಣಿಕೆ ಅಷ್ಟು ಕಾದಂಬರಿಗಳು ಹಾಗೂ ಇತ್ತಿಚೆಗೆ ಆರಂಭವಾದ ಎಲೆಕ್ಟ್ರಾನಿಕ್ ಮಾಧ್ಯಮದ ಬರಹಗಳನಷ್ಟೇ ಕರಗಿಸಿಕೊಳ್ಳಬಲ್ಲ ಒಬ್ಬ ಪ್ರೋಫೆಸರ್. ಹೈಸ್ಕೂಲು ದಿನಗಳಿಂದಲೇ ಪ್ರಾರಂಭವಾದ ಈ ಚಟ ಮೊದಮೊದಲು ಕೇವಲ ಪತ್ರಿಕೆ ಸುದ್ದಿಯ ಅನ್ವೇಷಣೆಯ ಕಡೆಗೆ ಇತ್ತು. ನಂತರ ಆಗಿದ್ದು ವಿಜಯ ಕರ್ನಾಟಕ ಎಂಬ ಹೆಸರಿನ ಪತ್ರಿಕೆಯ ಕೈ ಚಳಕ. ಅಸಲಿಗೆ ಅಂಕಣದ ಹುಚ್ಚು ಹತ್ತಿಸಿದ್ದೇ ನನಗೆ ಆ ಪತ್ರಿಕೆ. ಅದಕ್ಕೂ ಮುಂಚೆ ಪ್ರಜಾವಾಣಿ ಓದುತ್ತಿದ್ದನಾದರೂ ಅಂಕಣಗಳ ಗೋಜಿಗೆ ಹೋದವನಲ್ಲ. ಶುದ್ಧ ಸುದ್ದಿ ಅಷ್ಟೇ. ನನ್ನ ಪುಣ್ಯ. ಹೋಗಿದ್ದಿದ್ದರೆ ಆ ಸಮಯದಲ್ಲಿ ನ್ಯೂಟ್ರಲ್ ಆಗಿದ್ದ ನನ್ನಲ್ಲಿ ಎಡಪಂಥೀಯ ವಿಚಾರಧಾರೆ ಮೊಳಕೆ ಒಡೆದು ಈ ಹೊತ್ತಿಗಾಗಲೇ ಹೆಮ್ಮರವಾಗುತ್ತಿತ್ತು. ಇರಲಿ. ನಂತರ ಶುರುವಾಯಿತು. ಬೆತ್ತಲೆ ಜಗತ್ತು, ನೂರೆಂಟು ಮಾತು, ಜನಗಳ ಮನ, ಸೂರ್ಯ ಶಿಕಾರಿ,   ಪರಾಗ ಸ್ಪರ್ಶ, ಒಳಸುಳಿ, ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಎಲ್ಲ ಅಂಕಣಗಾರರಿಗೂ ನಾನು ಆಭಾರಿ.

ಪ್ರಚಲಿತ ವಿದ್ಯಮಾನಗಳ ವಿಷಯದಲ್ಲಿ ಆಸಕ್ತಿ ಇತ್ತಾದರೂ ಚರ್ಚೆ ಅಷ್ಟಕಷ್ಟೇ. ಕೇವಲ ಮನುಷ್ಯನ ಸಂಬಂಧಗಳು, ಭಾವನೆ, ಪ್ರೀತಿ ಪ್ರಣಯದ ಸಲ್ಲಾಪಗಳು, ಜೀವನದ ಮೌಲ್ಯಗಳು, ಸಮಾಜದಲ್ಲಿ ನಮ್ಮ ಜವಾಬ್ದಾರಿ, ಇನ್ನೊಬ್ಬರಿಗೆ ತೊಂದರೆ ಆಗದಂತೆ ಬದುಕುವ ಕಲೆ, ನಮ್ಮ ದೇಶ, ಪರಂಪರೆ, ಸಂಸ್ಕೃತಿ, ಧರ್ಮ, ಸ್ವಚ್ಛತೆ, ದಿನ ನಿತ್ಯದ ಕೆಲಸಗಳಲ್ಲಿ ಶಿಸ್ತು, ಒಡಹುಟ್ಟಿದವರೊಡನೆ ಇರುವ ಬಗೆ, ತಂದೆ ತಾಯಿಗಳಿಗೆ ಗೌರವ ಕೊಡುವುದು ಹೇಗೆ ಬರೀ ಇಂತಹ ವಿಷಯಗಳಿಗೆ ಸಂಭದಿಸಿದ ಬರಹಗಳನ್ನು ತುಂಬ ಇಷ್ಟ ಪಡುತ್ತಿದ್ದೆ.

ರವಿ ಬೆಳಗೆರೆ, ವಿಶ್ವೇಶ್ವರ ಭಟ್, ಪ್ರತಾಪ್ ಸಿಂಹ, ಶ್ರೀವತ್ಸ ಜೋಶಿ, ನಾಗತಿಹಳ್ಳಿ ಚಂದ್ರಶೇಖರ್, ಪಿ ತ್ಯಾಗರಾಜ್, ಚೈತನ್ಯ ಹೆಗಡೆ, ಓಶೋನ ಬರಹಗಳನ್ನು ಯಾವತ್ತೂ ಮಿಸ್ ಮಾಡುತ್ತೀರಲಿಲ್ಲ. ಅವರೂ ಅಷ್ಟೇ ನನ್ನ ಓದಿನ ಹಸಿವನ್ನು ತುಂಬಿಸಲೇ ಬರಯುತ್ತಿದ್ದಾರೋ ಅನಿಸುತ್ತಿತ್ತು. ಸುಮಾರು ಎಳೆಂಟು ವರ್ಷಗಳ ಅವಿನಾಭಾವ ಸಂಬಂಧ.

(ಇನ್ನೂ ಇದೆ)

No comments:

Post a Comment