Monday, November 7, 2016

ಪಾಪಗ್ರಸ್ತ ಮಹಾನಗರ - ಹುಬ್ಬಳ್ಳಿ

ಹುಬ್ಬಳ್ಳಿಯೊಂದಿಗೆ ನನ್ನದು ಸುಮಾರು ೨೦ ವರ್ಷಗಳ ಒಡನಾಟ. ಅಮ್ಮನೂ ಓದಿದ್ದು ಬೆಳೆದಿದ್ದು ಅಲ್ಲೇ. ನನ್ನ ಊರಿನಿಂದ ಸುಮಾರು ೧೨೦ ಕಿಮಿ ದೂರ. ಉತ್ತರ ಕರ್ನಾಟಕದಲ್ಲಿ ಬಹು ದೊಡ್ಡ ವಾಣಿಜ್ಯ ನಗರಿ, ಗಂಡು ಮೆಟ್ಟಿದ ನಾಡು ಅಂತೆಲ್ಲ ಕರೆಸಿಕೊಳ್ಳುವ ಆ ಊರಿನಲ್ಲಿ ಅಸಲಿಗೆ ಗಂಡಸರೇ ಇಲ್ಲವೇನೋ ಅನ್ನಿಸುವಷ್ಟು ನಿಸ್ತೇಜ ಜನ. ರಾಜಕೀಯವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಬಹು ದೊಡ್ಡ ಪಕ್ಷಗಳು. ಜನರೂ ಅಷ್ಟೇ ಮತ್ತೇ ಅವರವರನ್ನೇ ಆರಿಸುತ್ತ ಬಂದಿದ್ದಾರೆ. ನಾನು ಮೂಲತಹ ಬಿಜೆಪಿಯ ಕಟ್ಟಾ ಬೆಂಬಲಿಗನಾದರೂ ಹುಬ್ಬಳ್ಳಿ ಬಿಜೆಪಿಯನ್ನು ಕಾಂಗ್ರೆಸಿನಷ್ಟೇ ವೀರೊಧಿಸುತ್ತೇನೆ. ಧೂಳು, ಹಾಳು ಗುಂಡಿಗಳು ಬಿದ್ದ ರಸ್ತೆಗಳು, ಎಲ್ಲೆಲ್ಲೂ ಕೊಳಚೆ ಪ್ರದೇಶಗಳು, ಕಿರಿದಾದ ರಸ್ತೆಗಳು ಅಭಿವೃದ್ದಿ ಎಂಬ ಅಂಶವನ್ನೇ ಮರೆತ ಮಹಾನಗರ ಪಾಲಿಕೆ ಇವು ಆ ಊರಿನ ವಿಶೇಷತೆಗಳು. ಇದ್ದುದರಲ್ಲಿ ಧಾರವಾಡ ಸ್ವಲ್ಪ ಪರವಾಗಿಲ್ಲ. ಕೇವಲ ೨೦ ಕಿಮಿ ಅಂತರವಿದ್ಡರೂ ಧಾರವಾಡದ್ದು ಸ್ವಲ್ಪ ತಂಪಾದ, ಅರೆ ಮಲೆನಾಡು ಹವಾಗುಣ. ಜನರೂ ಅಷ್ಟೇ, ಸ್ವಲ್ಪ ವಿವೇಚನೆ, ನಾಗರಿಕತೆಯನ್ನು ಇನ್ನೂ ಉಳಿಸಿಕೊಂಡಿದ್ದಾರೆ. ೧೯೯೩ ರಲ್ಲಿ ಆಕಸ್ಮಿಕ ಚಿತ್ರದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡು ಚಿತ್ರೀಕರಣ ನಡೆದ ಜಾಗ ಕಿತ್ತೂರು ಚೆನ್ನಮ್ಮ ವೃತ್ತ ಟ್ರಾಫಿಕ್ ಎಂಬ ಬೆಂಕಿಗೆ ಬಿದ್ದು ಎಂದೋ ಉರಿದು ಹೋಗಿದೆ. ಸಾಲದ್ದಕ್ಕೆ ಬಿ ಆರ್ ಟಿ ಎಸ್ ಎಂಬ ಉಪಯೋಗವಿಲ್ಲದ, ದೂರದೃಷ್ಟಿ ಇಲ್ಲದ, ಆರ್ಥಿಕವಾಗಿ ಹೊರೆಯಾದ ಯೋಜನೆ. ಹುಬ್ಬಳ್ಳಿ ಜನರೇನೋ ಅದು ಬೆಂಗಳೂರಿನ ಮೆಟ್ರೊ ಯೋಜನೆಯಂತೆಯೇ ಬಹು ದೊಡ್ಡ ಯೋಜನೆ, ಅದರಿಂದ ನಮ್ಮ ನಗರದ ವಾಹನ ಸಂದಣಿ ಎಲ್ಲ ಕಡಿಮೆ ಆಗೇ ಆಗುತ್ತದೆ ಎಂಬ ಹುಚ್ಚು ಭ್ರಮೆಯಲ್ಲಿದ್ದಾರೆ. ಇಂಜನೀಯರಿಂಗ್ ಅಲ್ಲಿ ಎರಡು ಪದವಿ ಪಡೆದ ನಾನೇ ಇದನ್ನು ಹೇಳಬೇಕು ಅಂತೇನೂ ಇಲ್ಲಾ. ಸರಿಯಾಗಿ ಕಾಳಜಿ ಇರುವ ಯಾವುದೇ ಒಬ್ಬ ಸ್ಥಳಿಯ ನಾಗರೀಕನೂ ಇದನ್ನು ಹೇಳಿಯಾನು. ಕುಡಿಯುವ ನೀರಿನ ಸಮಸ್ಯೆ, ರಸ್ತೆ ಸಮಸ್ಯೆ, ಸರಿಯಾದ ಪಾರ್ಕ್ ಗಳು ಉಹುಂ, ಯಾವದೂ ಸರಿ ಇಲ್ಲಾ. ರಸ್ತೆ ಮಾರ್ಗವಾಗಿ ಒಮ್ಮೆ ಹುಬ್ಬಳ್ಳಿಯ ಬಸ್ ನಿಲ್ದಾಣಕ್ಕೆ ಹೋಗಿ ಬನ್ನಿ, ನಾನು ಹೇಳುವ ಎಲ್ಲ ಸಮಸ್ಯೆಗಳು ನಿಮ್ಮ ಕಣ್ಣಿಗೆ ಕಟ್ಟಿಲ್ಲವಾದರೆ ನನ್ನಾಣೆ. ಭಾರತ ಸರಕಾರ ಸ್ಮಾರ್ಟ್ ಸಿಟಿ ರೂಪಿಸುವ ಮುಂಚೆ ಎಲ್ಲ ನಗರದ ಸ್ಥಳಿಯ ನಾಗರಿಕರಿಗೆ ಆನ್ ಲೈನ್ ಮೂಲಕ ಅಭಿಪ್ರಾಯ ತಿಳಿಸುವಂತೆ, ಸಲಹೆ ಸೂಚನೆ ಕೊಡುವಂತೆ ಕೇಳಿ ಕೊಂಡಿತ್ತು. ಆದರೆ ಜನರು ಸ್ಪಂದಿಸದೆ ಇರುವ ಕಾರಣಕ್ಕೆ ಮೊದಲ ಪಟ್ಟಿ ಬಿಡುಗಡೆ ಆಗಾಗ ಹುಬ್ಬಳ್ಳಿ ಧಾರವಾಡದ ಹೆಸರು ಕೈ ತಪ್ಪಿ ಹೋಗಿತ್ತು. ಇಂತಹ ಮೂಲಭೂತ ಸೌಕರ್ಯಗಳೇ ಇಲ್ಲದ ನಗರಕ್ಕೆ ಯಾವ ಉದ್ಯಮಿ ತಾನೇ ತನ್ನ ಸಾಮ್ರಾಜ್ಯ ಕಟ್ಟಲು ಬರುತ್ತಾನೆ. ಮಾತನಾಡಿಸಲು ಹೋದರೆ, ಅಡಳಿತದಲ್ಲಿ ಇರುವ ಯಾರನ್ನೇ ದೂರುವುದು ಬಿಟ್ಟರೆ ಇಲ್ಲಿಯ ಜನ ಏನೂ ಮಾಡುವುದಿಲ್ಲ. ನನ್ನ ಪ್ರಕಾರ ತಪ್ಪು ಜನರದ್ದೇ. ನಮ್ಮ ಮನೆ, ನಮ್ಮ ಕಾಲನಿ ಅಷ್ಟೇ ಆದರೆ ಸಾಕೇ!? ನಮ್ಮ ನಗರ ಎನ್ನುವ ಕಾಳಜಿಯೂ ಇರಬೇಕಲ್ಲವೇ!!? ಸುಮಾರು ವರ್ಷಗಳ ನಂತರ ಭಾರತ ಸರಕಾರದ ಪರಿಶ್ರಮದಿಂದ ಲಭಿಸಿರುವ ಐ ಐ ಟಿ ಯನ್ನೇ ಬಹು ದೊಡ್ದ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವ ಬಿಜೆಪಿ ಸಂಸದರನ್ನು ಇಲ್ಲಿಯ ಜನ ಭುಜದ ಮೇಲೆ ಹೊತ್ತು ಮೆರವಣಿಗೆ ಮಾಡುತ್ತಿದ್ದಾರೆ. ಕೆ ಎಲ್ ಇ, ಎಸ್ ಡಿ ಎಂ ನಂತಹ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳು ಇದ್ದರೂ ಕಾಳಜಿ ತೋರಿಸುವ ಇರಾದೆ ಯಾರಿಗೂ ಇಲ್ಲ. ಕೇವಲ ತಾವು ಆಯಿತು ತಮ್ಮ ಉದ್ದಿಮೆ ಆಯಿತು ಎನ್ನುವ ಬಾಂಬೆ ಮಾರವಡಿಗಳೂ ಅಷ್ಟೇ. ಇಲ್ಲಿಯ ಜನರೇ ಇಷ್ಟು ಜಿಡ್ಡುಗಟ್ಟಿರುವ ಮನೋಭಾವ ಹೊಂದಿರುವಾಗ ಉತ್ತರ ಭಾರತದ ಆ ಸಮುದಾಯದಿಂದ ಏನನ್ನು ನಿರೀಕ್ಷಿಸಲು ಸಾಧ್ಯ. ನಿತ್ಯವೂ ವಲಸೆ ಬರುವ ಗ್ರಾಮೀಣ ಭಾಗದ ಜನರಿಗೂ ಸ್ವಚ್ಛತೆಯ ಅರಿವು ಇಲ್ಲ. ಸ್ಥಳಿಯರಿಗೂ ಇಲ್ಲ. ಇದೇ ಮನೋಭಾವ ಮುಂದುವರೆದರೆ ಮುಂದಿನ ೨೦ ವರ್ಷಗಳು ಕಳೆದರೂ ಈ ಪಾಪಗ್ರಸ್ತ ನಗರದ ಪರಿಸ್ಥಿತಿ ಇಷ್ಟೇ.

ಇನ್ನಾದರೂ ಜನ ಎಚ್ಚೇತ್ತುಕೊಳ್ಳಲಿ ಎಂಬುದಷ್ಟೇ ಈ ಲೇಖನದ ಆಶಯ.

No comments:

Post a Comment