೧೯೯೭-೯೮ ರ ದಿನಗಳು. ಪ್ರತಿ ಗುರುವಾರ ಸಂಜೆ ೭-೭:೩೦ ರ ನಡುವೆ ಅಪ್ಪಿ ತಪ್ಪಿ ಟಿವಿ ಹಚ್ಚಿದರೆ, ಕೆಂಪುಹಂಚು ಮೇಲಿರುವ ಅಲ್ಯೂಮಿನಿಯಂ ಕೊಳವೆ ಸಳಿಗಳು ಎಳೆದು ತಂದ ತರಂಗದಿಂದ, ಟಿವಿಯಲ್ಲಿ ಕೇವಲ ಮಳೆಯ ಸದ್ದು. ಮಳೆಯ ಹನಿಗಳ ನಡುವೆ ಮಾತಿಗಿಂತ ಮೌನವೇ ಹೆಚ್ಚು. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಅನ್ನುವ ಧಾರಾವಾಹಿ. ನಿಜವಾಗಿಯೂ ಅದೊಂದು ದೃಶ್ಯಕಾವ್ಯ. ಕಡು ಕತ್ತಲೆಯಲ್ಲಿ ಆ ಸರಣಿ ನೋಡಲೇಬೇಕು!
ಆ ಹೆಗ್ಗಡೆ ವಂಶ, ಚಿನ್ನಮ್ಮ, ಮುಕುಂದಯ್ಯ ಎಲ್ಲವೂ ನೆನಪಿದೆ. ನಮ್ಮ "ಅಭಿನಯ ಚಕ್ರವರ್ತಿ" ದತ್ತಣ್ಣ ಇದ್ದರೆ ಕೇಳಬೆಕೇ?? ಪಕ್ಕಾ ಅದು ಕುವೆಂಪು ಅವರದೇ ಧಾರಾವಾಹಿ ಅನ್ನೋದು ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯ ಕೊಡುಗೆ. ಜ್ಞಾನಪೀಠ ಎನ್ನುವುದು ಏನೋ ಒಂದು ದೊಡ್ಡ ಪ್ರಶಸ್ತಿ ಇದೆ, ಅದನ್ನ ಮೊದಲು ಕನ್ನಡಕ್ಕೆ ಅಂತ ಕೊಟ್ಟಿದ್ದು ಕುವೆಂಪು ಅವರಿಗೆ ಅಂತ ನಮ್ಮ ಟೀಚರ್ ತಲೆ ಕುಟ್ಟಿ ಹೇಳಿದ್ದರು. ಆ ವಯಸ್ಸಿಗೆ ನಾನಿರುವ ಬಯಲುಸೀಮೆಯನ್ನ ಅಕ್ಷರಶಃ ಮಲೆನಾಡು ಮಾಡಿದ್ದು ಆ ಧಾರಾವಾಹಿ. ಆ ನಂತರ ಆ ತರಹದ, ಹೆಚ್ಚು ಮಾತುಗಳೇ ಇಲ್ಲದ ಹಾಗೂ ಕೇವಲ ಮಳೆಯ ಶಬ್ದ ಕೇಳುವ ಚಿತ್ರ ಎಂದರೆ ಸೌಂದರ್ಯ ನಟಿಸಿದ ದ್ವೀಪ!!
ಕುವೆಂಪು ನಿಜವಾಗಲೂ ಕಾಡುವ ವ್ಯಕ್ತಿತ್ವ. ಜ್ಞಾನಪೀಠಿಗಳಲ್ಲಿ ಅವರು ಮಾತ್ರ ನಿಜವಾದ ಜಾತ್ಯತೀತ ವ್ಯಕ್ತಿ. ನಂತರದ ಬೇಂದ್ರೆ, ಕಾರಂತರು, ಮಾಸ್ತಿ, ಗೋಕಾಕರಲ್ಲಿ ಕೇವಲ ಅದ್ಭುತ ಸಾಹಿತ್ಯ.. ಇವರಲ್ಲಿ ಸಮಾಜವಾದ, ಜಾತ್ಯತೀತತೆ ಇವೆನ್ನೇಲ್ಲ ಹುಡುಕಬೇಡಿ.
ಯಾವಾಗ 'ಸಂಸ್ಕಾರ' ವಂತರಿಗೆ, ದೇವರ ಮೂರ್ತಿಯ ಮೇಲೆ ಉಚ್ಚೆ ಹೊಯ್ಯುವ ಸಮಗ್ರ ಸಾಹಿತ್ಯಕ್ಕೇಲ್ಲ ಪ್ರಶಸ್ತಿ ಕೊಡಲು ಶುರು ಮಾಡಿದರೋ ಆಗ ಬರೀ ಕುವೆಂಪು ಮಾತ್ರ ಉಳಿದರು. ಉಳಿದ ಎಲ್ಲವೂ ಶ್ರೀ ರಾಮಾಯಣ ದರ್ಶನಂ!!!